ಲೇಖನ ಹುಡುಕಿ

Sunday, June 29, 2025

ಉಣಲಿರದಿರುವವರ ನಡುವೆ ಉಣಲಿರುವವರ ಒಣ ರಾಜಕೀಯ

 ಇತ್ತೀಚೆಗೆ ನಟಿ ಲಕ್ಷ್ಮಿ ಅವರ ಮಾತು ಬಹಳ ಚರ್ಚೆಗೆ ಕಾರಣವಾಗಿದೆ. ಸ್ನೇಹಿತೆಯೊಬ್ಬಳು ತಲೆಗೆ ಬಣ್ಣವನ್ನೂ ಹಾಕದೆ ಬಹಳ ಹೀನಾಯ ಸ್ಥಿತಿಯಲ್ಲಿ ತನ್ನನ್ನು ನೋಡಲು ಬಂದಿದ್ದರು. ಅವರ ದಯನೀಯ ನೋಟ ತನಗೆ ಇಷ್ಟವಾಗಲಿಲ್ಲ. ಹಾಗಾಗಿ ಭೇಟಿಯಾಗದೇ ಕಳಿಸಿದೆ ಎಂದಿರುವ ಅವರ ಮಾತು ಅವರ ಅಹಂಕಾರ ಮತ್ತು ಅಸಡ್ಡೆ ತೋರಿಸುತ್ತದೆ ಎಂಬುದು ಹಲವರ ವಾದ. ಆದರೆ ನನಗೆ ಹಾಗೆ ಎನಿಸುವುದಿಲ್ಲ.

ದಯನೀಯ ಸ್ಥಿತಿಯಲ್ಲಿ ಇದ್ದು ತೋರಿಸಬೇಕೆಂದರೆ ನಟಿ ಲಕ್ಷ್ಮಿ ಸಹ ಸಾಕಷ್ಟು ದುಃಖ ಮತ್ತು ಕಷ್ಟವನ್ನು ನೋಡಿದವರು. ಆದರೆ ಎಂದೂ ಕೂಡ ತನಗೆ ಕಷ್ಟ ಇದೆ, ಇತ್ತು ಯಾವುದನ್ನೂ ಹೇಳಿಕೊಂಡು ಜನರಿಂದ ಅನುಕಂಪ ಗಿಟ್ಟಿಸಲಿಲ್ಲ. ಒಂದೇ ಸಮನೆ ವೈಯಕ್ತಿಕ ಜೀವನದ ಸೋಲು ಅವರನ್ನು ಹಿಂಡಿ ಹಿಪ್ಪೆ ಮಾಡಬೇಕಿತ್ತು. ಬಾಲ್ಯದಿಂದಲೇ ಒಂದು ನಿಲುಮೆ ಅವರ ಬದುಕಿನಲ್ಲಿ ನನಗೆ ಗೋಚರಿಸುತ್ತದೆ. ಈ ವೈಯಕ್ತಿಕ ನೋವುಗಳಿಗೆ ತಲೆಕೆಡಿಸಿಕೊಳ್ಳಬಾರದು. ಮತ್ತು ಇದು ಯಾವತ್ತು ಬಗೆಹರಿಯದ ಸಮಸ್ಯೆ. ತಾವು ಇದಕ್ಕೆ ಹೊಂದಿಕೊಂಡು ತಲೆ ಎತ್ತಿ ಬದುಕಬೇಕು. ಆ ಬದುಕನ್ನು ಮಾತ್ರ ಜನರೊಂದಿಗೆ ತೋರಿಸಿಕೊಳ್ಳಬೇಕು. ಇನ್ನು ಒಬ್ಬ ನಟಿಯಾಗಿ ಅನುಭವಿಸುವ ಇನ್ನೊಂದು ಸಮಸ್ಯೆ. ಪಾತ್ರಗಳೇ ತಾವಾಗಿ ಬದುಕನ್ನು ಅನುಭವಿಸಿ ನಟಿಸುವುದು. ಕೆಲವು ಚಿತ್ರಗಳನ್ನು ಬಿಟ್ಟರೆ ಬಹುತೇಕ ಚಿತ್ರಗಳಲ್ಲಿ ಅವರ ಪಾತ್ರ ಅಸಹನೀಯ ನೋವಿನಿಂದಲೇ ತುಂಬಿದ್ದು. ಕತೆಯಲ್ಲ ಜೀವನದಂತಹ ಕಾರ್ಯಕ್ರಮವನ್ನು ವರ್ಷಾನುಗಟ್ಟಲೆ ನಡೆಸಿಕೊಟ್ಟಿದ್ದು. ಇಂತಹ ಸಂದರ್ಭಗಳಲ್ಲಿ ಜೀವನದ ಕಟು ಸತ್ಯವನ್ನು ಹತ್ತಿರದಿಂದ ನೋಡಿದಾಗ ಅದರಿಂದ ಮನಸ್ಸಿಗೆ ಆಗುವ ನೋವು ಬಲ್ಲವರಿಗೆ ಮಾತ್ರ ಗೊತ್ತು. ಹಾಗಾಗಿ ಆಕೆ ಇಂತಹ ನೋವಿನ ವ್ಯಕ್ತಿಗಳು, ಸಂದರ್ಭಗಳಿಂದ ದೂರ ಉಳಿಯುವುದಕ್ಕೆ ಯತ್ನಿಸಿದರೆ ಅದೂ ಸಹ ಸಹಜವೇ. 

ಅವರ ನಗು, ವಿಶ್ವಾಸ ಎಲ್ಲವೂ ಸುಳ್ಳು, ನಾಟಕ ಎಂದು ನೀವು ಹೇಳಬಹುದು. ಆದರೆ ಅದು ನಾಟಕವಲ್ಲ. ಒಬ್ಬ ವ್ಯಕ್ತಿ ಅಗ್ನಿಪರೀಕ್ಷೆಗಳಲ್ಲಿ ಬಿದ್ದು, ಬಿದ್ದು ತನ್ನ ಅಹಂಕಾರವೆಲ್ಲ ಸುಟ್ಟಾಗ ಮಾಗುವ ಮನಸ್ಸಿನ ಸ್ಥಿತಿ. ಇಂತಹ ಸ್ಥಿತಿಯನ್ನು ತಲುಪಿರುವ ನಟಿ ಲಕ್ಷ್ಮಿ ಹೇಳಿರುವುದರಲ್ಲಿ ಯಾವುದೇ ತಪ್ಪು, ಅಹಂಕಾರದ ಅಭಿವ್ಯಕ್ತಿ ಕಾಣಿಸುವುದಿಲ್ಲ. ಹಾಗೊಮ್ಮೆ ಕಂಡರೆ ಅದು ನೋಡುವವರ ಅಪ್ರಬುದ್ಧತೆ ಅಥವಾ ನಟಿ ಲಕ್ಷ್ಮಿ ಬಗ್ಗೆ ಅವರಿಗಿರುವ ಅಜ್ಞಾನ ಅಂತ ಮಾತ್ರ ಹೇಳಬಹುದು. 

ಇಷ್ಟಕ್ಕೂ ಅವರ ನಿಲುಮೆಯನ್ನೇ ನೋಡಬಹುದಾದರೆ, ವಯಸ್ಸು, ಪರಿಸ್ಥಿತಿ ನಮ್ಮನ್ನು ಅಸಹಾಯಕರನ್ನಾಗಿ ತೋರಿಸಬಾರದು. ಇದ್ದಿದ್ದರಲ್ಲಿಯೇ ಸ್ವಚ್ಛವಾಗಿ, ಸುಂದರವಾಗಿ ಕಾಣಿಸಿಕೊಳ್ಳಬೇಕು ಎನ್ನುವುದು ಆ ಮಾತಿನ ಅರ್ಥ. ನಿಜ, ಮಹಿಳೆ ಇರಲಿ, ಪುರುಷನಿರಲಿ. ಎಲ್ಲಾ ಸರಿ ಇದ್ದು ನಗುತ್ತೇನೆ ಎನ್ನುವ ಮಾತು ಮೂರ್ಖತನದ್ದು. ಯಾಕೆಂದರೆ ಎಂತಹ ಯಶಸ್ವಿ ಮನುಷ್ಯನಿಗೂ ತನ್ನದೇ ನೋವು, ದುಃಖ, ಬೇರೆ ಬೇರೆ ಅಸಹಾಯಕತೆ ಇದ್ದೇ ಇರುತ್ತದೆ. ಆ ವ್ಯಕ್ತಿಯ ಯಶಸ್ಸಿಗೆ ಬಹಳಷ್ಟು ಜನರು ಕಾರಣರಾಗಿದ್ದರೆ ಒಂಟಿ ಹೋರಾಟದ ಅರಿವು ಇರುವುದಿಲ್ಲ. ಆಗ ಒಬ್ಬಂಟಿ ಹೋರಾಟಗಾರ ಮತ್ತು ಅವನ ಯಶಸ್ಸು ದೂರದ ಬೆಟ್ಟವಾಗಿ ಕಾಣಿಸುತ್ತದೆ. ಆ ಬೆಟ್ಟವನ್ನು ನೋಡುಗರು ತಮಗೆ ಬೇಕಾದ ಹಾಗೆ ವ್ಯಾಖ್ಯಾನಿಸುತ್ತಾರೆ. 

ಒಬ್ಬ ಕೂಲಿ ಮಾಡುವ ಅಥವಾ ಕೊಟ್ಟಿಗೆ, ತೋಟಗಳಲ್ಲಿ ಕೆಲಸ ಮಾಡುವ ಹೆಂಗಸಿಗೆ ತನ್ನ ಕೆಲಸಗಳಲ್ಲಿ ಚೆಂದವಾಗಿ ಬಾಚಿಕೊಂಡು ಹರಕು ಸೀರೆಯನ್ನಾದರೂ ಜನರಿಗೆ ಗೊತ್ತಾಗದಂತೆ ಉಟ್ಟುಕೊಳ್ಳುವ ಅಭಿಮಾನ ಇರಬೇಕು. ಅದನ್ನೇ ನಾನು ನೋಡಿದ ನನ್ನ ಆತ್ಮೀಯ ಹೆಣ್ಣುಮಕ್ಕಳು ನನಗೂ ಕಲಿಸಿರುವುದು. ನನ್ನ ಅಜ್ಜಿ, ಅಮ್ಮ ಎಲ್ಲ ಎಷ್ಟೋ ವರ್ಷಗಳಿಗೊಮ್ಮೆ ಹೊಸ ಸೀರೆ ನೋಡುತ್ತಿದ್ದ ದಿನಗಳಿದ್ದವು. ಹಾಸಿಗೆ ಹಿಡಿದ ಪತಿ, ಮಕ್ಕಳು, ಮೊಮ್ಮಗಳು ಇವರನ್ನೆಲ್ಲಾ ನೋಡಿಕೊಳ್ಳುತ್ತ ಸರಿಯುವ ಸಮಯದಲ್ಲಿ ದಿನಕ್ಕೆ ಸ್ನಾನ ಮಾಡಿ, ಒಗೆದ ಮಾಸಲು ಸೀರೆಯನ್ನೇ ಉಡುವ ಹೊತ್ತಲ್ಲಿ ಉದ್ದನೆಯ ಕೂದಲು ಬಾಚಿ, ಅಂಗಳದಲ್ಲಿ ಬೆಳೆದ ಹೂಮುಡಿಯಲು ಅಜ್ಜಿ ಮರೆಯುತ್ತಿರಲಿಲ್ಲ. ಸದಾ ಕೌಟುಂಬಿಕ ದೌರ್ಜನ್ಯ, ಬಡತನ, ಅಸಹಾಯಕತೆಯಲ್ಲಿ ಬೇಯುತ್ತಿದ್ದ ಅಮ್ಮ ಎಂದಿಗೂ ತನ್ನ ಹೊರನೋಟದಲ್ಲಿ ತೋರಿಸಿಕೊಂಡಿದ್ದಿಲ್ಲ. ಉಡುವ ಸೀರೆಯನ್ನೇ ನೀಟಾಗಿ ಮಡಿಕೆ ಮಾಡಿ ತನಗೆ ಬರುವಷ್ಟು ಚೆಂದಾಗಿ ಉಟ್ಟು, ತಲೆಬಾಚಿ ಶಿಸ್ತಾಗಿ ಇರುತ್ತಿದ್ದಳು. ಇವರಿಬ್ಬರ ಈ ಶಿಸ್ತಿಗೆ ಸುತ್ತಲಿನ ಗಂಡಸರು ಒಮ್ಮೆಯಾದರೂ ಅನುಭವಿಸಬೇಕೆಂದುಕೊಂಡರೆ ಅಥವಾ ಜೀವನ ಗೊತ್ತಿಲ್ಲದ ಮಹಿಳೆಯರು ಇವರನ್ನು ಬೇರೆಯದೇ ಸಾಲಿಗೆ ಸೇರಿಸಿ ಆಡಿಕೊಳ್ಳುತ್ತಿದ್ದರು. ಆದರೂ ಒಮ್ಮೆಯೂ ಜನರಿಗೆ ಬಾಯಿಗೆ ಹೆದರಿಯೊ, ಜೀವನದ ಹೊಡೆತಗಳಿಗೆ ಹೆದರಿಯೋ ತಮ್ಮ ಅಸ್ತಿತ್ವವನ್ನು ಮರೆತವರಲ್ಲ. ಇವತ್ತಿಗೂ ೮೫+ ಆಯಿ ಪುಸ್ತಕಗಳನ್ನು ಹುಡುಹುಡುಕಿ ಓದುತ್ತಾಳೆ. ಅಮ್ಮ ತನ್ನೆಲ್ಲಾ ಕೆಲಸಗಳನ್ನು ಬೇಗ ಬೇಗ ಮುಗಿಸಿ ಓದುವುದರಲ್ಲಿಯೇ ತನ್ನ ನೋವುಗಳನ್ನು ಮರೆಯುತ್ತಾಳೆ. ತಾವಾಯಿತು, ತಮ್ಮ ಬದುಕಾಯಿತು ಎಂದು ಬದುಕುವ ಈ ಹೆಣ್ಣುಮಕ್ಕಳು ಎಷ್ಟೇ ಕೆಲಸವಿದ್ದರೂ ಅಚ್ಚುಕಟ್ಟಾಗಿ ಮುಗಿಸಿ ತಮ್ಮದೂ ಎನ್ನುವ ಒಂದು ಸ್ಪೇಸ್ ಕಂಡುಕೊಳ್ಳುತ್ತಿದ್ದುದು, ಸುಂದರವಾಗಿ ಕಾಣಿಸುತ್ತ, ಫಳೆಂಬ ನಗುವಿನಲ್ಲಿ ತಮ್ಮ ಸುತ್ತಲಿನ ವಾತಾವರಣವನ್ನೇ ಬದಲಾಯಿಸುವ ಈ ವ್ಯಕ್ತಿಗಳು ನಿಜಕ್ಕೂ ಅದ್ಭುತ! 

ದುಃಖ ಇರುವವರು, ಬಡತನದಲ್ಲಿ ಇರುವವರು, ಸುಂದರವಾಗಿಲ್ಲದಿರುವವರು, ಯಾರಿಗೂ ಬೇಡವಾದವರು ‘ಖುಷಿಯಾಗಿ ಇರುವುದು’ ನಾಟಕ ಎನ್ನುವ ಮನಸ್ಥಿತಿ ಇದೆ ಕೆಲವರಿಗೆ. ಅದು ತೋರುಗಾಣಿಕೆ ಎನ್ನುವವರೂ ಇದ್ದಾರೆ. ಹಾಗೆ ತೋರಿಸಿಕೊಳ್ಳದೇ ಸದಾ ಹರಕು, ಕೊಳಕು, ಗೋಳು, ನೋವಿನ ಕಣ್ಣುಗಳು... ಇವುಗಳನ್ನು ಪ್ರದರ್ಶಿಸುತ್ತಿರುವುದೇ ಅಸಲೀ ವ್ಯಕ್ತಿತ್ವ ಎಂದು ಪ್ರತಿಪಾದಿಸುವವರೂ ಇದ್ದಾರೆ. ಈ ಅಸಲೀ ವ್ಯಕ್ತಿತ್ವ ಯಾರಿಗೆ ಇಷ್ಟವಾಗುತ್ತದೆ ಎಂದರೆ ಜೀವನವೆಂದರೆ ಯಾರೋ ಬರೆದಿಟ್ಟ ಅಚ್ಚುಕಟ್ಟಿನ ಚಿತ್ತಾರವಾಗಿರುವವರಿಗೆ. ಅವರಿಗೆ ತಮ್ಮಂತೆ ಎಲ್ಲವೂ ಇರದ ಅಥವಾ ಏನೂ ಇಲ್ಲದ ವ್ಯಕ್ತಿಗಳು ಸದಾ ಏನೂ ಇಲ್ಲದವರಂತೆಯೇ ಇರಬೇಕು. ಅವರ ಕಣ್ಣಲ್ಲಿ ಇಲ್ಲದವರು ಖುಷಿಯಾಗಿದ್ದರೆ ಏನೋ ಅಸಮಾಧಾನ, ಸಿಟ್ಟು. ಏನೂ ಇಲ್ಲದ ದುಃಖತಪ್ತ ವ್ಯಕ್ತಿಗಳು ಈ ಎಲ್ಲವೂ ಇರುವವರ ಅಹಂ ಅನ್ನು ಪರೋಕ್ಷವಾಗಿ ಪೋಷಿಸುತ್ತಾರೆ. ಈ ಸುಖಸ್ಥರಿಗೆ ಸದಾ ದುಃಖಿಯಾಗಿರುವವರಿಗೆ ಸಮಾಧಾನ ಹೇಳುವುದು ಒಂದು ರೀತಿಯ ಸಮಾಧಾನ ನೀಡುತ್ತದೆ. ಇಂತಹ ವ್ಯಕ್ತಿಗಳೂ ಒಂದೊಮ್ಮೆ ಆ ಪ್ರತಿಮೆಯಿಂದ ಹೊರಬಂದು ಒಳ್ಳೆಯ ಬಟ್ಟೆ, ನಗು ಧರಿಸಿ ಎದುರಿಗೆ ಬರಲಿ. ಇವರ ಅಸಲಿ ದೊಡ್ಡತನ ಹೊರಗೆ ಬೀಳುತ್ತದೆ. ಏನೂ ಇಲ್ಲದ ಇವರಿಗೆ ಎಷ್ಟು ಕೊಬ್ಬು ನೋಡು! ಎಂದು ಹೊಟ್ಟೆಯುರಿದುಕೊಳ್ಳುತ್ತಾರೆ. ಅಯ್ಯೊ ಮೊನ್ನೆ ಮೂರು ಕಾಸಿಗೆ ಯೋಗ್ಯತೆ ಇರಲಿಲ್ಲ. ಈಗ ನೋಡು, ಹೇಗಾಡುತ್ತಾಳೆ/ನೆ ಎಂದು ಅವರವರದೇ ಗುಂಪು ಕಟ್ಟಿಕೊಂಡು ಇವರನ್ನು ಹತ್ತಿಕ್ಕಲು ನೋಡುತ್ತಾರೆ. ಇಂತಹ 

ಒಣ ರಾಜಕೀಯವನ್ನು ಸ್ವಂತವಾಗಿ ಬಲ್ಲ ನನ್ನಂತವರಿಗೆ ಈ ಆಟ ಹೊಸದೇನಲ್ಲ. ಫೇಸ್ಬುಕ್ ಅಂತಹ ಮನಸ್ಸುಗಳನ್ನು ಹೊರತೆಗೆದಿಡುತ್ತದೆ. ಮತ್ತು ಎಚ್ಚರವನ್ನೂ ನೀಡುತ್ತದೆ. ಇದಕ್ಕಾಗಿ ಈ ಎಲ್ಲಾ ರಾಜಕೀಯ ನಾಟಕ ಕಲಾವಿದರಿಗೆ ಧನ್ಯವಾದಗಳನ್ನು ಹೇಳಬಯಸುತ್ತೇನೆ.  - ಶೀಲಾ ಭಟ್

  

Friday, September 13, 2024

ಚಿರಯೌವನಕ್ಕಾಗಿ ೬ ಜೀವನಸೂತ್ರಗಳು. ಇವನ್ನು ನೀವು ಅನುಸರಿಸಿದರೆ ಜಗತ್ತಿನ ಸುರ - ಸುಂದರಿಯರಲ್ಲಿ ನೀವೂ ಒಬ್ಬರಾಗುತ್ತೀರಿ.

ವಯಸ್ಸು ಯಾರನ್ನೂ ಬಿಡುವುದಿಲ್ಲ. ದೇಹ ಮತ್ತು ಮನಸ್ಸು  ಕಾಲ ಚಲಿಸಿದಂತೆ ಮಾಗುತ್ತವೆ. ಇದು ಬದುಕಿನ ಸೌಂದರ್ಯ. ಈ ಸುಂದರ, ಸಹಜ ಮಾಗುವಿಕೆ ಮನಸ್ಸಿಗೆ ಮುದ ನೀಡುತ್ತದೆ. ಆದರೆ ಬಹಳ ಸಂದರ್ಭ ವಯಸ್ಸಿಗಿಂತ ಮೊದಲೇ ವಯಸ್ಸಾದಂತೆ ಕಾಣುತ್ತೇವೆ. ಇದನ್ನು ತಪ್ಪಿಸಲು ಕೆಲವು ಸರಳ ಸೂತ್ರಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ಮುಪ್ಪಿನ ಕಳೆ ಮೈ-ಮನಸ್ಸಿಗೆ ಬರದಂತೆ ನೋಡಿಕೊಳ್ಳಬಹುದು.

೧. ಆಹಾರ - ಪ್ರತಿದಿನ ಒಳ್ಳೆಯ ಗುಣಮಟ್ಟದ ಆಹಾರ ಸೇವಿಸುವುದು ಆರೋಗ್ಯಕ್ಕೆ ಅನುಕೂಲ. ಸಸ್ಯಾಹಾರಿಗಳಾಗಿದ್ದರೆ ದಿನಕ್ಕೆ ಒಂದು ಲೋಟ ಹಾಲು, ಒಂದು ಹಣ್ಣು, ಪಲ್ಯ, ಸೊಪ್ಪು, ತರಕಾರಿಗಳಿರುವ ರೊಟ್ಟಿ ಅಥವಾ ಮುದ್ದೆ ಊಟ, ಮೊಸರು/ಮಜ್ಜಿಗೆ ಸೇವಿಸಬೇಕು. ಮಾಂಸಾಹಾರಿಗಳಾಗಿದ್ದರೆ ಮೀನು, ಮೊಟ್ಟೆಗಳ ಜೊತೆಗೆ ಸಸ್ಯಾಹಾರವನ್ನೂ ಸೇರಿಸಿಕೊಂಡರೆ ದೇಹದ ವಯಸ್ಸಾಗುವಿಕೆ ನಿಧಾನವಾಗುತ್ತದೆ.

೨. ನೀರು - ಪ್ರತಿನಿತ್ಯ ೨ ಲೀ. ನೀರು ದೇಹಕ್ಕೆ ಬೇಕು. ಅದಕ್ಕಿಂತಲೂ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ , ಬಾಯಿ ತೊಳೆಯುವ ಮೊದಲು ಒಂದೆರಡು ಲೋಟ ನೀರು ಕುಡಿದರೆ ದೇಹದೊಳಗೆ ನಿರ್ಜಲವಾಗುವಿಕೆ ತಪ್ಪುತ್ತದೆ. ಚರ್ಮ ಸುಕ್ಕುಗಟ್ಟದೆ ಹೊಳಪಾಗಿರುತ್ತದೆ.

೩. ನಿದ್ದೆ - ಪ್ರತಿದಿನ ಕನಿಷ್ಠ ೫ - ೮ ಗಂಟೆಗಳ ಕಾಲ ಅವರವರ ಚಟುವಟಿಕೆ, ಅಭ್ಯಾಸಗಳಿಗೆ ತಕ್ಕಂತೆ ನಿದ್ದೆ ಮಾಡಬೇಕು. ಇದೂ ಸಹ ದೇಹದ ವಯಸ್ಸಾಗುವಿಕೆಯನ್ನು ನಿಯಂತ್ರಿಸುತ್ತದೆ. ಇದಕ್ಕಿಂತ ಕಡಿಮೆ ಅಥವಾ ಹೆಚ್ಚು ನಿದ್ದೆ ಮಾಡಿದರೆ ಬೇಗನೆ ವಯಸ್ಸಾಗುವುದು ಖಚಿತ.

೪. ಚಟುವಟಿಕೆ - ದೇಹ ಮತ್ತು ಮನಸ್ಸು ಎಷ್ಟು ರಚನಾತ್ಮಕವಾಗಿ ಚಟುವಟಿಕೆಯಿಂದ ಕೂಡಿರುತ್ತವೆಯೊ ಅಷ್ಟು ವಯಸ್ಸು ಕಡಿಮೆಯಾಗುತ್ತದೆ. ಮನೆಯ ಒಳ - ಹೊರಗೆ ಎಷ್ಟು ಪರಾವಲಂಬಿಗಳಾಗುತ್ತೀರಿ, ಎಷ್ಟು ಆರಾಮವಾಗಿರುತ್ತೀರಿ ಅಷ್ಟು ದೇಹದ ಅವಯವಗಳು ತಪ್ಪು ಸಂದೇಶ ಸ್ವೀಕರಿಸುತ್ತವೆ. ಆಕ್ಟಿಯೋಪರಿಕ್ಸ್ ತರಹ ದೇಹದ ಅಂಗಾಂಗಗಳು ತಾವು ನಿರುಪಯುಕ್ತ ಎಂದು ತೀರ್ಮಾನಿಸಿ ನಿಷ್ಕ್ರಿಯಗೊಳ್ಳತೊಡಗುತ್ತವೆ. ಆದ್ದರಿಂದ ದೇಹವನ್ನು ಚಟುವಟಿಕೆಯಿಂದ, ಚುರುಕಾಗಿ ಇಟ್ಟುಕೊಳ್ಳಬೇಕು.

೫. ಚಿಂತನೆ - ದೇಹಕ್ಕೂ , ಮನಸ್ಸಿಗೂ ಅವಿನಾಭಾವ ಸಂಬಂಧ. ಮನಸ್ಸು ಚಿಂತೆ ಮಾಡಬಾರದು. ಚಿಂತನೆ ಮಾಡಬೇಕು. ಜೀವನದ ಎಲ್ಲಾ ಆಗುಹೋಗುಗಳನ್ನು ಸಮಚಿತ್ತದಿಂದ ಎದುರಿಸಬೇಕು. ಧನಾತ್ಮಕವಾದ ಚಿಂತನೆ ಮಣಿಪೂರ ಚಕ್ರವನ್ನು ಸದೃಢವಾಗಿಡುತ್ತದೆ. ಜೀರ್ಣಕ್ರಿಯೆ ಚೆನ್ನಾಗಿ ಆಗಿ ದೇಹ ಹಗುರವಾಗಿ ಇರುತ್ತದೆ. ಅಸೂಯೆ, ಸಿಟ್ಟು, ದ್ವೇಷ ಮತ್ತು ಸ್ವಾನುಕಂಪದಿಂದ ಯಾವಾಗಲೂ ಒಂದು ದೂರವನ್ನು ಕಾಯ್ದುಕೊಳ್ಳಬೇಕು. ಇದರಿಂದ ಸಹ ದೇಹ ವಯಸ್ಸಾಗದೆ ಯೌವನದಿಂದ ಹೊಳೆಯುತ್ತಿರುತ್ತದೆ.

೬. ನಿಶ್ಚಿತ , ನಿರಂತರ, ನಿರುದ್ವೇಗ ಬದುಕು - ಆರ್ಥಿಕವಾಗಿ ನಿಶ್ಚಿತ ಆದಾಯ ಬರುವ, ನಿರಂತರವಾಗಿ ಮಾಡಲು ಕೆಲಸ ಇರುವ ಯಾವುದೇ ಉದ್ವೇಗ, ಗೊಂದಲಗಳಿಗೆ ಅವಕಾಶ ಇಲ್ಲದ ಜೀವನವನ್ನು ರೂಪಿಸಿಕೊಳ್ಳಿ. ಇದು ಮೊದಲ ೪ ಅಂಶಗಳನ್ನು ದಿನನಿತ್ಯ ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. 


ಜಗತ್ತಿನ ಸುರ-ಸುಂದರಿಯರೆಲ್ಲರ ಸೌಂದರ್ಯದ ಗುಟ್ಟು ತೆಗೆದಾಗ ಈ ೬ ಅಂಶಗಳನ್ನು ಸಾಮಾನ್ಯವೆಂದು ಗುರುತಿಸಲಾಗಿದೆ. ನೀವೂ ಈ ಸೂತ್ರಗಳನ್ನು ಅನುಸರಿಸಿ,  ಚಿರಯೌವನಿಗರಾಗಿ. 

ನಾಗಮಂಗಲದ ಗಲಭೆಯಲ್ಲಿ ತಪ್ಪು ಯಾರದ್ದು?


            

ಸಪ್ಟೆಂಬರ್ ೧೦ರ ರಾತ್ರಿ ನಾಗಮಂಗಲ ಪಟ್ಟಣದಲ್ಲಿ ೨೫ ಅಂಗಡಿಗಳು ಭಸ್ಮವಾದವು. ಕೋಟ್ಯಾಂತರ ರೂ.ನಷ್ಟವಾಯಿತು. ೨೦೨೪ ಗಣೇಶೋತ್ಸವ ಕಹಿ ನೆನಪಿನೊಂದಿಗೆ ಕೊನೆಗೊಂಡಿತು. ಮುಖ್ಯ ಮಾಧ್ಯಮಗಳಲ್ಲಿ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ವಾಗ್ವಿವಾದ ತಾರಕಕ್ಕೇರಿತು. ಮನೆಯಲ್ಲಿ ಕುಳಿತು ಇವನ್ನೆಲ್ಲ ನೋಡುತ್ತಿದ್ದ ವೀಕ್ಷಕ ಮಾತ್ರ ಗಲಭೆ ಹೇಗಾಯಿತು? ಯಾರ ತಪ್ಪು ಎಂಬ ಗೊಂದಲದಲ್ಲಿದ್ದುದು ಸುಳ್ಳಲ್ಲ. ಹಿಂದೂಗಳು, ಮುಸಲ್ಮಾನರು ಎಂಬ ಪೂರ್ವಾಗ್ರಹದಲ್ಲಿದ್ದ ಸಮಾಜದ ಎಲ್ಲಾ ವರ್ಗದವರು ಈ ಸಂದರ್ಭವನ್ನು ತಮಗೆ ಬೇಕಾದ ಹಾಗೆ ತೆಗೆದುಕೊಂಡರು. 

            ಇಷ್ಟಕ್ಕೂ ನಾಗಮಂಗಲದ ಗಲಭೆ ಹೊಸತೇನಲ್ಲ. ಸಮಾಜದಲ್ಲಿ ಕೋಮು ಮತ್ತು ಶಾಂತಿ ಸೌಹಾರ್ದ ಕೆಡಿಸುವ ಘಟನೆಗಳು ಎಲ್ಲಾ ಕಾಲಕ್ಕೂ ನಡೆದಿವೆ. ನಡೆಯುತ್ತವೆ, ನಡೆಯಲಿವೆ. ಇಲ್ಲಿ ಪ್ರಶ್ನೆ ಏಳುವುದು ಕಾರಣ ಮತ್ತು ಕಾರಣಕರ್ತರ ಬಗ್ಗೆ ಮಾತ್ರ.

            ನಾಯಕನ್ ಸಿನಿಮಾ ನೆನಪಾದರೆ ಆಶ್ಚರ್ಯವಿಲ್ಲ. ಗಲಭೆಯಿಂದ ಲಾಭ ಯಾರಿಗೆ? ಎಂಬ ಪ್ರಶ್ನೆ ಎತ್ತಿದಾಗ ಗಲಭೆಯ ದೋಷಣೆ ಹೊರಿಸಲು ಸಾಧ್ಯವಾಗಿದ್ದು, ಆಡಳಿತಾರೂಢ ಸರ್ಕಾರಕ್ಕೆ ಆರೋಪ ಬಂದಿದ್ದು ಎಲ್ಲಾ ಲಾಭವಾಗಿದ್ದು ವಿರೋಧಪಕ್ಷಕ್ಕೆ. ಜೊತೆಗೆ ಗಲಭೆಯಲ್ಲಿ ಹಾನಿಗೊಂಡ ಬಹುತೇಕ ಅಂಗಡಿಗಳು ಮುಸ್ಲಿಂ ಕೋಮಿಗೆ ಸೇರಿದ್ದು ಇನ್ನೊಂದು ಸಂಶಯಕ್ಕೆ ಕಾರಣ.

            ಗಣೇಶೋತ್ಸವದ ಮೆರವಣಿಗೆ ಮಸೀದಿಯ ಬಳಿಗೆ ಹೋಗುವುದು, ಅಲ್ಲಿ ಹೋದ ಮೇಲೆ ಜೈಶ್ರೀರಾಂ ಎಂದು ಕೂಗಿ ಪ್ರಚೋದಿಸುವುದು, ಅದಾಗಲೇ ಕಾದಿದ್ದಂತೆ ಇನ್ನೊಂದು ಗುಂಪು ಕಲ್ಲು ತೂರಾಟ ಮಾಡುವುದು ಇವೆಲ್ಲವೂ ಅವತ್ತಿನ ಘಟನೆ ಪೂರ್ವ ನಿಯೋಜಿತ ಯೋಜನೆಯೇ? ಎಂಬುದಕ್ಕೆ ಪೂರಕವಾಗಿವೆ. ಅಷ್ಟಲ್ಲದೆ, ಪೊಲೀಸ್ ವ್ಯವಸ್ಥೆ ಸರಿಯಾಗಿಲ್ಲದೆ ಅಶ್ರುವಾಯು ಸಿಡಿಸಿದ್ದು, ರಾತ್ರೋ ರಾತ್ರಿ ಅಂಗಡಿಗಳಿಗೆ ನುಗ್ಗಿ ನಾಶ ಮಾಡಿದ್ದು ಇವೆಲ್ಲವೂ ಮೊದಲೇ ಬರೆದ ನಾಟಕದ ದೃಶ್ಯಗಳೇನೋ ಎನಿಸುತ್ತವೆ. 

            ಪ್ರಕರಣದ ತನಿಖೆಯ ಭಾಗವಾಗಿ ಗುಂಪಿನಲ್ಲಿ ಬಂದ ೫೦ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಆದರೆ ಆ ಪಾಲಕರು/ಪೋಷಕರು ತಮ್ಮ ಮಕ್ಕಳು ಅಮಾಯಕರು, ನಿರಪರಾಧಿಗಳು ಎಂದು ಹೇಳಿಕೆ ಕೊಡುತ್ತಿದ್ದಾರೆ. ಮನೆಯ ಹೊರಗೆ ಹೋಗುವ ಗಂಡು ಮಕ್ಕಳು ಏನು ಕೆಲ್ಸ ಮಾಡುತ್ತಾರೆ? ಯಾರೊಂದಿಗೆ ಬೆರೆಯುತ್ತಾರೆ ಎಂಬ ಖಬರಿಲ್ಲದ ಪೋಷಕರು ತಮ್ಮ ಮಕ್ಕಳು ಅಮಾಯಕರೆಂದು ಹೇಗೆ ನಂಬುತ್ತಾರೆ? ಇದೂ ವ್ಯವಸ್ಥಿತ ಸಂಚಿನ ಒಂದು ಭಾಗವೇ? ಎಂಬೆಲ್ಲ ಪ್ರಶ್ನೆಗಳನ್ನು ಮೂಡಿಸುತ್ತವೆ.

            ಅದಾಗಲೇ ಶಾಲೆಗಳಲ್ಲಿ ಪೋಷಕರು ಮಕ್ಕಳಲ್ಲಿ ಜಾತಿ, ಕೋಮು, ಆಹಾರದ ವಿಷಯಗಳಲ್ಲಿ ಗೇಲಿ ಮಾಡುವುದು, ತಾರತಮ್ಯ ಮಾಡುವುದು ಮತ್ತು ಪಕ್ಷಪಾತ ಧೋರಣೆಯನ್ನು ಹೊಂದುವುದು ಕಲಿಸಿ ಕಳಿಸುತ್ತಿದ್ದಾರೆ. ಅವರು ದೊಡ್ಡವರಾಗಿ ಈ ರೀತಿಯ ಸಮಾಜ ಘಾತುಕ ಚಟುವಟಿಕೆಯಲ್ಲಿ ತೊಡಗಲಾರರು ಎಂದು ಯಾರಾದರೂ ಹೇಳಬಹುದೆ? 

            ನಾಗಮಂಗಲದ ಘಟನೆ ಎಲ್ಲಿ, ಯಾವಾಗ ಬೇಕಾದರೂ ನಡೆಯಬಹುದು. ಪೋಷಕರು , ಮಕ್ಕಳು ಎಚ್ಚೆತ್ತು ಕೊಂಡು ರಾಜಕೀಯ ಕುತಂತ್ರಗಳಿಗೆ ತಮ್ಮನ್ನು ಬಲಿಕೊಡದಂತೆ ತಮ್ಮನ್ನು ತಾವೇ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದು ಭವಿಷ್ಯದಲ್ಲಿ ಇಂತಹ ದುರ್ಘಟನೆ ನಡೆಯದಂತೆ ನೋಡಿಕೊಳ್ಳಲು ಅತ್ಯವಶ್ಯಕ.

 

ದರ್ಶನ್ ಮತ್ತು ಪವಿತ್ರಾ ಸಂಬಂಧ ಎಷ್ಟು ದಿನ ಬಾಳುತ್ತದೆ?


  
ದರ್ಶನ್ ಮತ್ತು ಪವಿತ್ರಾ ಸಂಬಂಧ ಎಷ್ಟು ದಿನ ಬಾಳುತ್ತದೆ?

            ಇಂತಹದ್ದೊಂದು ಪ್ರಶ್ನೆ ಈಗ ದರ್ಶನ್ ಮತ್ತು ಪವಿತ್ರಾ ಅಭಿಮಾನಿಗಳಲ್ಲಿ ಮೂಡತೊಡಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅದಾಗಲೇ ಜೈಲು ಸೇರಿರುವ ಇಬ್ಬರ ಮಧ್ಯೆ ದೂರ ಬಂದಾಗಿದೆ. ಪರಪ್ಪನ ಅಗ್ರಹಾರದಲ್ಲಿ ಒಂದೇ ಜೈಲಿನಲ್ಲಿ ಇದ್ದೀವೆಂಬ ಭಾವನೆಯಾದರೂ ಇತ್ತು. ಆದರೀಗ ದೂರದ ಬಳ್ಳಾರಿ ಜೈಲಿಗೆ ದರ್ಶನ್ ವರ್ಗಾವಣೆಯಾದ ನಂತರ ಪವಿತ್ರಾ ಈಗ ಒಬ್ಬಂಟಿಯಾಗಿದ್ದಾರೆ. ಅತ್ತ ಜೈಲಿಗೆ ಪತ್ನಿಯನ್ನು ಕರೆಸಿಕೊಳ್ಳುತ್ತಿರುವ ದರ್ಶನ್ ಇತ್ತ ಪ್ರೇಯಸಿಯ ದುಃಖವನ್ನು ಹೆಚ್ಚು ಮಾಡುತ್ತಿರುವುದಂತೂ ಸತ್ಯವಾಗಿದೆ.

              ಪವಿತ್ರಾ ಹೇಳಿಕೆಯ ಪ್ರಕಾರ ದರ್ಶನ್ ಮತ್ತು ಪವಿತ್ರಾ ಫೆಬ್ರವರಿಯಲ್ಲಿ ಜಗಳವಾಡಿ ದೂರವೇ ಇದ್ದಾರೆ. ದರ್ಶನ್ ವಿವಾಹ ವಾರ್ಷಿಕೋತ್ಸವವನ್ನು ಪತ್ನಿಯೊಂದಿಗೆ ಆಚರಿಸಿಕೊಂಡಿದ್ದು ಪವಿತ್ರಾರನ್ನು ಕೆರಳಿಸಿತ್ತು. ಆ ನಂತರ ತಮ್ಮ ಮತ್ತು ದರ್ಶನ್ ಸಂಬಂಧವನ್ನು ಹೊರಹಾಕಲು ಇನ್ಸ್ಟಾ ಖಾತೆಯನ್ನು ಪವಿತ್ರಾ ಬಳಸಿಕೊಂಡಿದ್ದರು. ಇದಕ್ಕೆ ವಿಜಯಲಕ್ಷ್ಮಿ ಸರಿಯಾಗಿಯೇ ಉತ್ತರ ಕೊಟ್ಟಿದ್ದರು. ಇವರಿಬ್ಬರ ಜಗಳವನ್ನು ನೋಡಿ ವಿಜಯಲಕ್ಷ್ಮಿ ಪರ ನಿಂತಿದ್ದ ರೇಣುಕಾಸ್ವಾಮಿ. ದರ್ಶನ್ ರಿಂದ ಪವಿತ್ರಾರನ್ನು ದೂರ ಮಾಡಲು ತನ್ನದೇ ಆಟವಾಡಿದ್ದ ರೇಣುಕಾಸ್ವಾಮಿ ಕೊನೆಗೆ ಮಸಣ ಸೇರಿದ್ದ. 

            ಪತ್ನಿ ಮತ್ತು ಪ್ರೇಯಸಿಯ ನಡುವೆ ಹೈರಾಣಾಗಿದ್ದ ದರ್ಶನ್ ಪ್ರೇಯಸಿಯ ಮೇಲಿನ ಪ್ರೀತಿಯನ್ನು ಸಾಬೀತು ಮಾಡಲು ಕೊಲೆ ಮಾಡಿದರಾ? / ಮಾಡಿಸಿದರಾ?ಎನ್ನುವ ಪ್ರಶ್ನೆಯೂ ಇದೆ.  ಜೊತೆಗೆ ಅದಾಗಲೇ ಬಿಪಿ, ಸಕ್ಕರೆ ಕಾಯಿಲೆಗಳಿಂದ ಬಳಲುತ್ತಿದ್ದ ದರ್ಶನ್ ಪ್ರೇಯಸಿಯನ್ನು ತೃಪ್ತಿಪಡಿಸಲಾಗದ ತಲ್ಲಣದಲ್ಲಿದ್ದರಾ? ಆ ತಲ್ಲಣವೇ ರೇಣುಕಾಸ್ವಾಮಿಯ ಗುಪ್ತಾಂಗದ ಫೋಟೊ/ವಿಡಿಯೊ ನೋಡಿದ ಕೂಡಲೇ ಕೊಲೆ ಮಾಡುವಷ್ಟು ಕೆರಳಲು ಕಾರಣವಾಯಿತಾ? ಎಲ್ಲದಕ್ಕೂ ಖುದ್ದು ದರ್ಶನ್ ಉತ್ತರ ಹೇಳಬೇಕಷ್ಟೆ.

            ಕಾನೂನಾತ್ಮಕವಾಗಿ ಇನ್ನೂ ಪತ್ನಿಯಾಗಿರುವ ವಿಜಯಲಕ್ಷ್ಮಿ ದರ್ಶನ್ ಜೊತೆಗೆ ನಿಲ್ಲಬೇಕಾಗಿರುವುದು ಅನಿವಾರ್ಯವಾಗಿದೆ. ಗಂಡ ಜೈಲಿನಲ್ಲಿರುವಾಗ ಖಾಸಗಿ ಔತಣಕೂಟಕ್ಕೆ ಹೋಗಿರುವ ವಿಜಯಲಕ್ಷ್ಮಿ ಬಗ್ಗೆ ಅಭಿಮಾನಿಗಳಲ್ಲಿ ಅನುಮಾನ ಮೂಡಿಸತೊಡಗಿದೆ. ಆದಾಗ್ಯೂ ಗಂಡ ಜೈಲಿಗೆ ಹೋದಾಗ ಹೆಂಡತಿ ತನ್ನ ಬದುಕನ್ನು ಬದುಕಲು ಹಕ್ಕಿಲ್ಲವೆ? ಎಂಬ ಪ್ರಶ್ನೆಯೂ ಇದೆ. ೨೦೧೩ರ ದಾಂಪತ್ಯ ಕಲಹ ಮತ್ತು ಜೈಲುವಾಸದ ನಂತರ ದರ್ಶನ್ ಪತ್ನಿಯಿಂದ ವಿಮುಖರಾಗಿ ಪವಿತ್ರಾ ಸೆರಗು ಸೇರಿದ್ದರು. ೧೧ ವರ್ಷಗಳಾದರೂ ವಿಜಯಲಕ್ಷ್ಮಿ ಮಗನಿಗಾಗಿ, ಸ್ಥಾನ ಮಾನಕ್ಕಾಗಿ ಪತ್ನಿ ಸ್ಥಾನ ಬಿಟ್ಟುಕೊಟ್ಟಿರಲಿಲ್ಲ. ದರ್ಶನ್ ಜೈಲುಪಾಲಾಗಿರುವ ಈ ಸಂದರ್ಭದಲ್ಲಿ ಮನೆ, ಕಾನೂನು ಎಲ್ಲಾ ನಿಭಾಯಿಸುವ ಜೊತೆಗೆ ಗಂಡನ ಭಾವನಾತ್ಮಕ ಬೆಂಬಲಕ್ಕೂ ನಿಲ್ಲಬೇಕಿದೆ. ಈ ಅಗ್ನಿಪರೀಕ್ಷೆಯ ಸನ್ನಿವೇಶ ಮಾಜಿ ಪತಿ-ಪತ್ನಿಯನ್ನು ಮತ್ತೆ ಒಂದು ಮಾಡಿದರೂ ಆಶ್ಚರ್ಯವಿಲ್ಲ.  



            ಇವೆಲ್ಲದರ ನಡುವೆ ಸಾಮಾಜಿಕ ಬೆಂಬಲವಿಲ್ಲದ, ಕಾನೂನು ಹೋರಾಟದಲ್ಲೂ ಒಂಟಿಯಾಗಿರುವ ಪವಿತ್ರಾ ದರ್ಶನ್ ಸಾಂಗತ್ಯವನ್ನು ಮುಂದುವರೆಸುತ್ತಾರಾ? ಪತ್ನಿ ಪ್ರೇಮ, ಕುಟುಂಬ, ಇಂಡಸ್ಟ್ರಿ, ಸಮಾಜ, ಕಾನೂನು, ಅಭಿಮಾನಿಗಳು ಇವುಗಳ ನಡುವೆ ದರ್ಶನ್ ನಿಜವಾಗಿಯೂ ಪವಿತ್ರಾ ಜೊತೆಗೆ ನಿಲ್ಲುತ್ತಾರಾ?ಸಮಯವೇ ಉತ್ತರ ಹೇಳಬೇಕು.

            ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ಆರಂಭವಾಗುವ ಹಂತದಲ್ಲಿದೆ. ವಿಚಾರಣೆ ಮುಗಿದು ಶಿಕ್ಷೆ ಪ್ರಕಟವಾಗುವ ಹೊತ್ತಿಗೆ ದರ್ಶನ್ - ಪವಿತ್ರಾ ಯುಗಳಗೀತೆಗೂ ಒಂದು ಕ್ಲೈಮ್ಯಾಕ್ಸ್ ದೊರೆಯಲಿದೆ. 


Friday, October 15, 2021

ಕಳ್ಳ ಮನಸು ಮಳ್ಳು ಬದುಕೂ

 


ಬಡತನ ಅಂದರೆ ಏನು? ತಿಳಿದುಕೊಳ್ಳುವುದಕ್ಕೂ ಮೊದಲು ಅನುಕೂಲ/ಶ್ರೀಮಂತಿಕೆ ಎನ್ನುವುದನ್ನು ತಿಳಿಯಬೇಕು. ಕೈಯಲ್ಲಿ ಹಣವಿದ್ದು ಸಾಲವಿಲ್ಲದೆ ಬೇಕಾದ್ದನ್ನೆಲ್ಲ ಆರಾಮಾಗಿ ಕೊಂಡು, ಕಂಡಲ್ಲೆಲ್ಲ ನಮ್ಮದೇ ಖರ್ಚಿನಲ್ಲಿ  ಓಡಾಡಬಹುದಾದ ಸ್ಥಿತಿಯೆ ಅನುಕೂಲವಾಗಿರುವುದು ಎನ್ನಬಹುದು. ಇದಕ್ಕೆ ವಿರುದ್ಧವಾದ ಸ್ಥಿತಿ ಬಡತನ. ಈ ಬಡತನ ಮತ್ತು ಸಿರಿತನ ಜೀವನದ ಎರಡು ಮುಖಗಳು. ನಾನು ಈ ಎರಡು ಮುಖವನ್ನೂ ಬಲ್ಲೆ. ಯಾವುದು ಹೆಚ್ಚು ಇಷ್ಟ ಎಂದು ಕೇಳಿದರೆ ಎರಡೂ ಇಷ್ಟ, ಎರಡೂ ಇಷ್ಟವಿಲ್ಲ. ಎರಡೂ ಒಂದು ಹಂತದವರೆಗೆ ಬಹಳ ಚೆಂದ. ಅವುಗಳ ಗಡಿ ದಾಟಿದಾಗ ಎರಡೂ ಮಗ್ಗುಲಲ್ಲಿ ಚುಚ್ಚುವ ಗುಲಾಬಿ ಹೂವಿನ ಮುಳ್ಳಿನಂತೆ.ನನ್ನದೇ ಉದಾಹರಣೆ ತೆಗೆದುಕೊಳ್ಳಿ


ಹನ್ನೆರಡನೇ ವರ್ಷದ ವರೆಗೆ ವಾರದಲ್ಲೊಂದೆರಡು ದಿನ ಬಡತನದ ದರ್ಶನವಾಗುತ್ತಿತ್ತು. ಹುಲ್ಲಿನ ಮನೆ. ಮಣ್ಣಿನ ನೆಲ. ಕನಕಾಂಬರ ಹೂ ಬೆಳೆದು, ಕಟ್ಟಿ ಮಾರುತ್ತಿದ್ದ ಅಮ್ಮ. ಬಾಳೆಕಾಯಿ, ತರಕಾರಿ ಕೊಟ್ಟು ಅದರೊಂದಿಗೆ ಬದುಕು ಸಾಗಿತ್ತು. ವಾರಕ್ಕೊಮ್ಮೆ ಮನೆಗೆ ಹೋದರೆ ಹೂಬಿಡಿಸಲು, ಹೂಕಟ್ಟಲು ಅಮ್ಮನಿಗೆ ನೆರವಾಗುತ್ತಿದ್ದೆ. ಬೇಸಿಗೆ ರಜೆಯಲ್ಲಿ ಧಾನ್ಯಗಳನ್ನು ಕೀಳುತ್ತಿದ್ದೆವು. ಹಸು, ಕರು, ನಾಯಿಗಳ ಕಜ್ಜಿ, ಗಾಯಗಳನ್ನು ನಾನು ಅಮ್ಮ ಸೇರಿ ಸ್ವಚ್ಛಗೊಳಿಸಿ ಔಷಧಿ ಹಾಕುತ್ತಿದ್ದೆವು. ತರಕಾರಿ ಬೆಳೆಗಳು, ಭತ್ತ, ಧಾನ್ಯಗಳ ಬೆಳೆಗಳ ಮಧ್ಯೆ ನನಗೆ ಅದಮ್ಯ ಆನಂದವಿತ್ತು.  ಮಧ್ಯಮ ವರ್ಗದ ಅಜ್ಜಿಮನೆಯ ಕರೆಂಟು ಬೆಳಕಿಗಿಂತ ಮನೆಯ ಚಿಮಣಿಬುರುಡೆ ಅಪ್ಯಾಯವಾಗಿತ್ತು. 


ಕುಟುಂಬದಲ್ಲಿ ಆಗಾಗ ಮೂದಲಿಕೆ ಇತ್ತು. ನೀನೇ ದೊಡ್ಡವಳು. ಎಲ್ಲರ ಜವಾಬ್ದಾರಿ ಇದೆ. ಸ್ವಲ್ಪವಾದ್ರೂ ಗಮನ ಕೊಟ್ಟು ಓದು. ಬೇರೆ ಪುಸ್ತಕ, ಆಟಗಳು ಯಾವುದಕ್ಕೂ ಪ್ರಯೋಜನಕ್ಕೆ ಬಾರವು! 25/25 ಬಂದ್ರೂ ಅಷ್ಟೆ. 23/25ಬಂದ್ರೂ ಅಷ್ಟೆ. ನನಗೆ ಈ ಭಾಷೆ ಇಷ್ಟವಿಲ್ಲ, ನನಗೆ ಬರುವುದೇ ಇಷ್ಟು ಎಂದು ಉತ್ತರ ಪತ್ರಿಕೆಯಲ್ಲಿ ಬರೆದುಬಂದಾಗಲೂ ಅಷ್ಟೇ. ಜವಾಬ್ದಾರಿ ಇದೆ, ಏನೂ ಸಾಕಾಗದು. ಯಾತಕ್ಕೂ ಬಾರದು. 

ಹಾಗಿದ್ದರೂ ನಾನು ಊರ ದೊಡ್ಡ, ಚಿಕ್ಕ ಹುಡುಗರ ಜೊತೆಗೆ ಇಡೀ ದಿನ ಗಿಲ್ಲಿದಾಂಡು ಆಡುತ್ತ, ಕಾಡುಮೇಡು ಅಲೆಯುತ್ತ ಆನಂದದಿಂದ ಇದ್ದೆ. ಟಿವಿ ಇದ್ದ ಮನೆಗಳಲ್ಲಿ ನೋಡಲು ಬಿಡದೆ ಆರಿಸಿದಾಗ ಇನ್ಯಾರದ್ದೋ ಮನೆಯ ಕಟ್ಟೆಯ ಮೇಲೆ ತರಂಗ, ಸುಧಾ, ಮಹಾಭಾರತ ಓದುತ್ತ ಪ್ರತ್ಯಕ್ಷಳಾಗಿರುತ್ತಿದ್ದೆ. ಊರಿನ ಹಬ್ಬಗಳ, ಹಣ್ಣು, ಕಾಯಿ, ಹೊಳೆ, ಗದ್ದೆ, ತೋಟ, ಕಾಲುವೆ ಎಲ್ಲಾ ನನ್ನವೇ ಆಗಿದ್ದವು. ಯಾರ ಮನೆ, ಯಾವ ಜನ ಯಾವುದೂ ನನಗೆ ಬೇರೆ ಎನಿಸುತ್ತಲೇ ಇರಲಿಲ್ಲ. ರಜಾದಿನಗಳಲ್ಲಿ ಬೆಳಿಗ್ಗೆ ಎದ್ದ ಮೇಲೆ ಕೆಲಸಗಳನ್ನು ಮುಗಿಸಿ ಹೊರಬಿದ್ದರೆ ಮಧ್ಯಾಹ್ನ ಊಟಕ್ಕೆ ಹಾಜರು. ಮಧ್ಯಾಹ್ನ ಕೆಲಸಗಳನ್ನು ಮುಗಿಸಿ ಹೊರಬಿದ್ದರೆ ರಾತ್ರಿ 8-9ಕ್ಕೆ ಹಾಜರು. ರಜೆ ಇಲ್ಲದಾಗ ಶಾಲೆ. ಶಾಲೆ ಅವಧಿ ಮುಗಿದ ಮೇಲೆ ಅದೇ ಊರ ಸುತ್ತಾಟ. ಜೀವನದ ಪ್ರತಿ ಮಗ್ಗಲನ್ನೂ ಶೋಧಿಸಿ, ಅದ್ಯಾಕೆ, ಇದ್ಯಾಕೆ ಹುಡುಕುವುದಕ್ಕೇ ಸಮಯ ಸಾಲುತ್ತಿರಲಿಲ್ಲ. ತಲೆತುಂಬ ಪ್ರಶ್ನೆಗಳಿದ್ದಾಗ ನಾನು ಹೆಣ್ಣು, ಕತ್ತಲಾಗುವುದರೊಳಗೆ ಮನೆಗೆ ಹೋಗಬೇಕು ಎಂಬ ಪರಿಜ್ಞಾನ ಇರುವುದು ಕಷ್ಟ. ಅದಾಗಲೇ ನಾನೊಬ್ಬ ಚೈತನ್ಯ, ದೇಹವನ್ನೂ ಮೀರಿದ ಆತ್ಮ ಎನ್ನುವ ಅರಿವಾಗಿಹೋಗಿತ್ತು. 


ಅದಕ್ಕೆ ಸರಿಯಾಗಿ ಅಷ್ಟು ಸ್ವಚ್ಛಂದವಾಗಿದ್ದ ನನ್ನ ಮೇಲೆ ಯಾವ ಗಂಡಸರೂ ಅಷ್ಟಾಗಿ ಅನುಚಿತವಾಗಿ ವರ್ತಿಸಿರಲಿಲ್ಲ. (ಅಕ್ಕಂದಿರು, ಸಹಪಾಠಿಗಳು ಬಹಳ ತರಬೇತಿ ಕೊಡಲು ಪ್ರಯತ್ನಿಸಿದರು. ಕೊನೆಗೆ ಆಗದೆ ಇದೊಂದು ಜಾಣಪೆದ್ದು ಎಂದು ದೂರವಿಟ್ಟರು)

ಆ ವಿಷಯದಲ್ಲಿ ಅತೀ ಮುಗ್ಧಳಾಗಿದ್ದ ನನ್ನನ್ನು ಬಳಸಿಕೊಳ್ಳಲು ಬಂದಿದ್ದ "ಒಬ್ಬ" ಅಣ್ಣನನ್ನು ಛಿ ನೀನು ಸರಿ ಇಲ್ಲ ಎಂದು ತಳ್ಳಿ ಬಂದಿದ್ದೆ. ಆ ನಂತರ  ದೂರದಿಂದಲೇ ತಪ್ಪಿಸಿಕೊಂಡು ಬಿಡುತ್ತಿದ್ದೆ. ಕೆಲವೇ ದಿನಗಳಲ್ಲಿ ಅವರ ಮನೆಯಲ್ಲಿ ಮಗುವಿನ ಕಾಲ್ಗೆಜ್ಜೆ ಕಾಣೆಯಾಯಿತು. ಅದನ್ನು ಅವರ ಮನೆಯಲ್ಲೇ ಸದಾ ಅದು ಇದು ಓದಿಕೊಂಡಿರುವ ನಾನೇ ತೆಗೆದುಕೊಂಡಿದ್ದು ಎನ್ನುವ ಮಾತು ಬಂತು. ಹಾಗಂತ ನನ್ನ ಕರೆದು ಕೇಳಲಿಲ್ಲ. ಮನೆಯ ಹಿರಿಯರಿಗೆ ಹೇಳಲಾಯಿತು. ಆಗ ಮೊದಲ ಬಾರಿಗೆ ಓ ಬೆಳ್ಳಿಯ ವಸ್ತುಗಳು ಇಷ್ಟೊಂದು  ಮೂಲ್ಯ ಮತ್ತು ಅವುಗಳಿಂದ ಕಳ್ಳತನದ ಅಪವಾದವೂ ಬರಬಹುದು ಎಂದು ಅರ್ಥವಾಯಿತು. ಅಷ್ಟರೊಳಗೆ ನನ್ನವೇ ಕಾಲ್ಗೆಜ್ಜೆ ಕಳೆದುಕೊಂಡು ಸಿಕ್ಕಾಪಟ್ಟೆ ಬೈಸಿಕೊಂಡಿದ್ದೆ. ಅದು ತಲೆಗೆ ಹೋಗಿರಲಿಲ್ಲ. ಆದರೆ ಯಾವಾಗ ನನ್ನದಲ್ಲದ ತಪ್ಪಿಗೆ ಆರೋಪ ಬಂದಿತೊ ಬಹಳ ನೋವಾಗಿತ್ತು.


ಇದಕ್ಕೂ ಮೊದಲೊಮ್ಮೆ ಕಳ್ಳತನದ ಅಪವಾದ ಬಂದಿದ್ದು, ಶಾಲೆಯ ಮುಖ್ಯೋಪಾಧ್ಯಾಯರು ನನ್ನ ಭರವಸೆಗೆ ಕಾರಣವಾದ ಘಟನೆ ಹೇಳಿದ್ದೇನೆ. ಹೀಗೆ ಬದುಕು ಬಡತನದ ಚುರುಕು ಮುಟ್ಟಿಸುತ್ತಲೇ ಇತ್ತು. ಹೈಸ್ಕೂಲಿಗೆ ಮನೆಯಲ್ಲಿ ಓದಲು ಬಂದ ಮೇಲೆ ಬದುಕು ಇನ್ನಷ್ಟು ಸೊಗಸು ಕಂಡಿತು. ಬೆಳವಣಿಗೆಯ ತೊಂದರೆಗಳಿಂದ ಹುಟ್ಟಿದ ತಮ್ಮನಿಗೂ, ಚಿಕ್ಕ ವಯಸ್ಸಿನಲ್ಲೇ ಸಾಲು ಮಕ್ಕಳ ತಾಯಾದ ಅಮ್ಮನಿಗೂ ಪದೆ ಪದೇ ಹುಷಾರಿರುತ್ತಿರಲಿಲ್ಲ.ತಂಗಿ ಬೇರೆ ಅಜ್ಜಿ ಮನೆಯಲ್ಲಿದ್ದಳು. ಅವಳನ್ನು ನೋಡಲು ಸಹ ಹೋಗಬೇಕಾಗುತ್ತಿತ್ತು.  ಊರಿಗೆ 3 ಕಿ.ಮೀ ನಡೆದರೆ ದಿನಕ್ಕೆ ಮೂರು ಬಸ್ಸು. ತಪ್ಪಿದರೆ 5 ಕಿ.ಮೀ. ನಡೆಯಬೇಕು. ವೈದ್ಯರು ಮೂರು ದಿನದ ಔಷಧಿ ಕೊಟ್ಟು ವಾರದ ನಂತರ ಮತ್ತೆ ಬರಲು ಹೇಳುತ್ತಿದ್ದರು. ಸಾರಿಗೆ ಮತ್ತು ಬಸ್ ಚಾರ್ಜ್ ಸಮಸ್ಯೆಯಿಂದಾಗಿ ತಿಂಗಳಲ್ಲಿ 15 ದಿನ ಅಮ್ಮ ಇರುತ್ತಿರಲಿಲ್ಲ.  ಮನೆಯಲ್ಲಿ ಹಸುವನ್ನು ನೋಡಿಕೊಳ್ಳುವುದು, ಕೆಲವೊಮ್ಮೆ ಹಾಲು ಹಿಂಡುವುದು, ರೇಷ್ಮೆ ಹುಳಗಳಿಗೆ ಸೊಪ್ಪು ಬಿಡಿಸಿ, ಕತ್ತರಿಸಿ ಹಾಕುವುದು, ರೇಷ್ಮೆ ಗಿಡಗಳಿಗೆ ಗೊಬ್ಬರ ಹಾಕುವುದು, ಕೊಟ್ಟಿಗೆ ತೊಳೆಯುವುದು, ಮನೆಕೆಲಸ ಮುಗಿಸಿ ಹೈಸ್ಕೂಲಿಗೆ ಸಮಯಕ್ಕೆ ಸರಿಯಾಗಿ ಹೋಗುವುದು ನಡೆದಿತ್ತು. ಇದಲ್ಲದೆ ಶಾಲೆಯಲ್ಲಿ ಸಹ ಜವಾಬ್ದಾರಿಗಳಿದ್ದವು. ಇವುಗಳಿಗೂ ಬಡತನಕ್ಕೂ ಏನು ಸಂಬಂಧ ಕೇಳುತ್ತೀರಾ?


ಸರ್ವೇ ಗುಣಾಃ ಕಾಂಚನಮಾಶ್ರಯಂತಿ ಎನ್ನುವ ಮಾತಿದೆ. ಸ್ವಲ್ಪ ಹಿನ್ನೆಲೆ, ಸ್ಥಿತಿವಂತಿಕೆ ಮತ್ತು ಗಂಡು ಎಂಬ ಉಪಾಧಿ ಇರಬೇಕು ಎನ್ನುವ ಅರಿವು ಅದಾಗಲೇ ಆಗಿತ್ತು. ಶಾಲೆಯ ಸ್ಪರ್ಧೆಗಳು, ಮನೆಯಲ್ಲಿ ಸಹಕಾರಗಳು, ಜನರಲ್ಲಿ ಮೆಚ್ಚುಗೆಯ ಮಾತು ಇವೆಲ್ಲವೂ ಹಣ ಮತ್ತು ಲಿಂಗವನ್ನು ಆದರಿಸಿರುತ್ತವೆ. ಇಲ್ಲವಾದರೆ ಯಾವುದಾದರೂ ಬಲಿದಾನಕ್ಕೆ ತಯಾರಿರಬೇಕಾಗುತ್ತದೆ. ಯಾವ ಒಳ್ಳೆಯ ಗುಣಗಳು ಎಷ್ಟೇ ಇರಲಿ, ಎಷ್ಟೇ ಸಾಮರ್ಥ್ಯ ಇರಲಿ. ಸೊ ಕಾಲ್ಡ್ ಮೇಲ್ಜಾತಿಯೇ ಆಗಿರಲಿ. ಅದು ನಗಣ್ಯವಾಗಿರುತ್ತದೆ. 


ಆದಾಗ್ಯೂ ನನಗೆ ಬೇಸರವಿರಲಿ. ಹತಾಷೆ, ನಿರಾಶೆ ಎರಡೂ ಇರಲಿಲ್ಲ. ಕಟ್ಟಿಗೆಯ ಒಲೆಯಲ್ಲಿ ಒದ್ದೆಕಟ್ಟಿಗೆ ಒಣಗಿಸಿ ಅಡುಗೆ ಮಾಡುವಾಗಲೂ, ಒರಳಿನಲ್ಲಿ ಬೋಗಣಿ ಅಕ್ಕಿ ರುಬ್ಬುವಾಗಲೂ ನನಗವು ಆಟದಂತೇ ಅನಿಸುತ್ತಿತ್ತು. ಈಗಲೂ ಮಕ್ಕಳನ್ನು ಕಟ್ಟಿಕೊಂಡು ಆಡುವಾಗೆಲ್ಲ ನನಗೆ ಇವನು ಗದರುತ್ತಿದ್ದರೆ ಸುಮ್ಮನೆ ನಕ್ಕುಬಿಡುತ್ತೇನೆ. ಬಡತನ, ತರತಮ, ಅಪವಾದ, ಹಿಂದಿನ ಬಾಣ, ಮುಂದಿನ ಇರಿತ ಯಾವುದೂ ನನ್ನ ಒಳಗಿನ ಸಂತೋಷ ಕುಂದಿಸದು. ಈ ನಾಗರೀಕತೆಯ ಸೋಗು ನನ್ನ ಬಹಳಷ್ಟು ಸಂತೋಷಗಳನ್ನು ಕಸಿದಿದೆ ನಿಜ. ಆದರೆ ಕಳ್ಳ ಮನಸ್ಸು ಮಳ್ಳು ಆಡಂಬರಕ್ಕೆ ಮರುಳಾಗದೆ ತಪ್ಪಿಸಿಕೊಂಡು ಹೊಸ ಸಂತಸವನ್ನು ಕಂಡುಕೊಳ್ಳುತ್ತದೆ. ಅದಕ್ಕೆ ಗೊತ್ತು, ಈ ಮಣ್ಣಿನ ಗಂಧ, ಬೀಳುವ ಮಳೆ, ಒಗ್ಗರಣೆಯ ಘಮ, ರಂಗೋಲಿಯ ಅಂದದಂತಹ ಸಣ್ಣ ಸಣ್ಣ ಖುಷಿಗಳೇ ಬದುಕಿನ ನಿಜವಾದ ಸಂಭ್ರಮ.


 - ಶೀಲಾ ಭಟ್

ಉಣಲಿರದಿರುವವರ ನಡುವೆ ಉಣಲಿರುವವರ ಒಣ ರಾಜಕೀಯ

 ಇತ್ತೀಚೆಗೆ ನಟಿ ಲಕ್ಷ್ಮಿ ಅವರ ಮಾತು ಬಹಳ ಚರ್ಚೆಗೆ ಕಾರಣವಾಗಿದೆ. ಸ್ನೇಹಿತೆಯೊಬ್ಬಳು ತಲೆಗೆ ಬಣ್ಣವನ್ನೂ ಹಾಕದೆ ಬಹಳ ಹೀನಾಯ ಸ್ಥಿತಿಯಲ್ಲಿ ತನ್ನನ್ನು ನೋಡಲು ಬಂದಿದ್ದರು...